खबर / पोस्ट / जानकारी / विज्ञापन
दिनांक : 📅 1095740 - 6 - मनोरंजन दिवस |
| 2026-01-17 |
👁️ 5826 |
ಈಶ್ವರ ಖಂಡ್ರೆ ಸೇರಿ ಕುಟುಂಬಸ್ಥರಿAದ ಅಗಲಿದ ಆತ್ಮಕ್ಕೆ ಮಹಾರತಿ: ಬಸವಲಿಂಗಪಟ್ಟದ್ದೇವರು, ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯ: ಭಾಲ್ಕಿಯಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿಮಳಿಗೆ ಮುಚ್ಚಿ ಗೌರವ
ಭೀಮಣ್ಣನಿಲ್ಲದ ಭಾಲ್ಕಿಯಲ್ಲಿ ನೀರವ ಮೌನ: ಅಭಿಮಾನಿಗಳಿಂದ ಅಶ್ರುತರ್ಪಣ
==============
ಬೀದರ, ಜನವರಿ.17 (ಕರ್ನಾಟಕ ವಾರ್ತೆ):- ಶುಕ್ರವಾರ ರಾತ್ರಿ ಲಿಂಗೈಕ್ಯರಾದ ಸ್ವಾತಂತ್ರ್ಯ ಸೇನಾನಿ, ಏಕೀಕರಣದ ನೇತಾರ, ಕನ್ನಡ ಪ್ರೇಮಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಕರ್ಮಭೂಮಿ ಭಾಲ್ಕಿಯಲ್ಲಿ ಇಂದು ನೀರವ ಮೌನ ಆವರಿಸಿತ್ತು.
ತಮ್ಮ ಕ್ಷೇತ್ರ ಭಾಲ್ಕಿ ಮತ್ತು ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ರೈತರ ಕಲ್ಯಾಣಕ್ಕಾಗಿ, ಬಡವರ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಕರ್ಮಯೋಗಿ ಭೀಮಣ್ಣ ಖಂಡ್ರೆ ಅವರ ದರ್ಶನಕ್ಕೆ ಸಹಸ್ರಾರು ಜನರು ತಂಡೋಪ ತಂಡವಾಗಿ ಆಗಮಿಸಿ ಅಂತಿಮ ನಮನ ಸಲ್ಲಿಸಿ, ಅಶ್ರುತರ್ಪಣ ನೀಡಿದರು.
ಭಾಲ್ಕಿಯ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮಳಿಗೆಗಳನ್ನು ಮುಚ್ಚಿ ತಮ್ಮ ಕ್ಷೇತ್ರದ ಪ್ರಗತಿಗಾಗಿ ಹಗಲಿರುಳು ದುಡಿದ ಮೇರು ನಾಯಕನಿಗೆ ಗೌರವ ಸಲ್ಲಿಸಿದರು.
ಭೀಮಣ್ಣ ಪಾರ್ಥಿವ ಶರೀರಕ್ಕೆ ಮಹಾರತಿ:ಇಂದು ಬೆಳಗ್ಗೆ ಗಾಂಧಿಗAಜ್ ನ ಖಂಡ್ರೆ ನಿವಾಸದಲ್ಲಿ ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕುಟುಂಬದ ಸದಸ್ಯರು ಪಾರ್ಥಿವ ಶರೀರಕ್ಕೆ ಮಹಾರತಿ ಬೆಳಗಿದರು.
ಪವಿತ್ರ ಆತ್ಮವಿದ್ದ ದೇಹ ಶುದ್ಧಿಗಾಗಿ ಜಳಕ ಮಾಡಿಸಿ, ಲಿಂಗಪೂಜೆ ಮಾಡಿ, ಭಸ್ಮಧಾರಣೆ, ರುದ್ರಾಕ್ಷಿ ಮಾಲೆ ತೊಡಿಸಿ, ಧೂಪ, ದೀಪಾರತಿ, ಪಾದಪೂಜೆ ಮಾಡಿಸಿದರು. ಪುತ್ರರಾದ ಈಶ್ವರ ಬಿ ಖಂಡ್ರೆ, ಅಮರ ಕುಮಾರ್ ಖಂಡ್ರೆ, ಪುತ್ರಿಯರಾದ ಶಕುಂತಲಾ, ನಾಗಮ್ಮ, ಡಾ. ಆಶಾ, ಡಾ. ಶೋಭಾ, ಭಾರತಿ ಹಾಗೂ ಮೊಮ್ಮಕ್ಕಳಾದ ಡಾ. ಗುರುಪ್ರಸಾದ್ ಖಂಡ್ರೆ, ಸಂಸದ ಸಾಗರ್ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ, ಆರತಿ ಮಾಡಿದರು. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಕಂಬನಿ ತುಂಬಿದ ಕಣ್ಣು, ತಂದೆಯ ಕಾರ್ಯ ಸ್ಮರಿಸಿದ ಈಶ್ವರ ಖಂಡ್ರೆ
60ರ ದಶಕದಲ್ಲೇ ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದ್ದ ಭೀಮಣ್ಣ ಖಂಡ್ರೆ
=================
ಬೀದರ, ಜನವರಿ.17 (ಕರ್ನಾಟಕ ವಾರ್ತೆ):- ಬಡವ, ಬಲ್ಲಿದ, ಬಡವ, ಶ್ರೀಮಂತ ಎಲ್ಲರೂ ಸಮಾನರು, ಮೇಲ್ಜಾತಿ, ಕೀಳು ಜಾತಿ ಎಂಬ ಭಾವನೆಯೇ ತಪ್ಪು ಎಂದು ಪ್ರತಿಪಾದಿಸುತ್ತಿದ್ದ ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ 60ರ ದಶಕದಲ್ಲೇ ಅಸೃಶ್ಯತೆ ವಿರುದ್ಧ ಹೋರಾಟ ಮಾಡಿದ್ದರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಮರಿಸಿದರು.
ಶುಕ್ರವಾರ ಶಿವೈಕ್ಯರಾದ ತಮ್ಮ ತಂದೆ ಭೀಮಣ್ಣ ಖಂಡ್ರೆ ಅವರ ಪಾರ್ಥವ ಶರೀರಕ್ಕೆ ಪೂಜೆ ಸಲ್ಲಿಸಿದ ತರುವಾಯ ಮಾತನಾಡಿದ ಅವರು, ಬಸವಾದಿ ಶರಣರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಾವು ಜೀವಿಸಿದ್ದ ನೂರ್ಕಾಲವೂ ಕಾಯಕಯೋಗಿಯಾಗಿ, ಕರ್ಮಯೋಗಿಯಾಗಿ ಜನರಿಗಾಗಿ, ಜನರಿಗೋಸ್ಕರ ಬದುಕಿದವರು ತಮ್ಮ ತಂದೆ ಎಂದರು.
ಮುಟ್ಟಿ-ತಟ್ಟಿ ಎಂಬ ಅನಿಷ್ಠ ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು ತಮ್ಮ ಸಮುದಾಯದ ಹಿರಿಯರನ್ನು ಸಮಾಜವನ್ನೇ ಎದುರುಹಾಕಿಕೊಂಡು ಹೋರಾಟ ಮಾಡಿದ ತಮ್ಮ ತಂದೆ, ತಮ್ಮ ದೀಕ್ಷಾ ಗುರು ಚನ್ನಬಸವಪಟ್ಟದ್ದೇವರ ಮನವೊಲಿಸಿ ಅಶೋಕನಗರದ ನಿವಾಸಿಗಳನ್ನು ಭಾಲ್ಕಿ ಮಠಕ್ಕೆ ಕರೆತಂದು ಸ್ನಾನ ಮತ್ತು ವಿಭೂತಿ ಧಾರಣೆ ಮಾಡಿಸಿ, ಭಾಲ್ಕೇಶ್ವರ ದೇವಾಲಯದ ಸಿಹಿನೀರ ಬಾವಿಯಿಂದ ನೀರು ಸೇದಿಸಿ ಕುಡಿಸುವ ಮೂಲಕ ಕ್ರಾಂತಿಯನ್ನೇ ಮಾಡಿದ್ದರು ಎಂಬುದನ್ನು ನೆನಪಿಸಿಕೊಂಡರು.
102 ವರ್ಷಗಳ ಸಾರ್ಥಕ ಜೀವನ ನಡೆಸಿದ್ದ ಭೀಮಣ್ಣ ಖಂಡ್ರೆ ಅವರು ಅಜಾತಶತ್ರುವಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಹೈದ್ರಾಬಾದ್ ಕರ್ನಾಟಕದ ವಿಮೋಚನೆಗಾಗಿ, ಏಕೀಕರಣಕ್ಕಾಗಿ ಹೋರಾಡಿದ್ದ ಅವರು, ಶಾಸಕರಾಗಿ, ಸಚಿವರಾಗಿ, ವಿಧಾನಪರಿಷತ್ ಸದಸ್ಯರಾಗಿ, ಸಭಾನಾಯಕರಾಗಿ ಬೀದರ್ ಜಿಲ್ಲೆಯ ಸಮಗ್ರ ಪ್ರಗತಿಗೆ ಶ್ರಮಿಸಿದ್ದರು.
ನಿಷ್ಠುರವಾದಿಗಳಾಗಿದ್ದ ಅವರು ಅನ್ಯಾಯ ಕಂಡರೆ ತಮ್ಮವರು, ಅನ್ಯರು ಎಂಬ ಭೇದವಿಲ್ಲದೆ ಪ್ರತಿಭಟಿಸುತ್ತಿದ್ದರು, ಅಸಹಾಯಕರಿಗೆ ನ್ಯಾಯ ಕೊಡಿಸುತ್ತಿದ್ದರು ಎಂದರು.
ರೈತರಿಗೆ ಬೆಳೆ ನಷ್ಟವಾದಾಗ, ಬೆಂಕಿ ಮಳೆಯಿಂದ ನಷ್ಟ ಸಂಭವಿಸಿದಾಗ ಸರ್ಕಾರದ ವಿರುದ್ಧವೇ ಹೋರಾಟ ಮಾಡಿ ಪರಿಹಾರ ಕೊಡಿಸಿದ್ದರು. ಶರಣರ ಬಗ್ಗೆ ಅವಮಾನಕರ ರೀತಿಯಲ್ಲಿ ಮತ್ತು ಸಮಾಜದ ಜನರ ಭಾವನೆಗೆ ಧಕ್ಕೆ ಬರುವಂತೆ ಕೆಲವು ಕೃತಿಗಳಲ್ಲಿ ತಿರುಚಿ ಬರೆದಾಗ ಅದರ ವಿರುದ್ಧ ಹೋರಾಟ ಮಾಡಿ ಕೃತಿಯನ್ನೇ ಮುಟ್ಟುಗೋಲು ಹಾಕಿಸಿದ್ದರು. ಹಾವನೂರು ಆಯೋಗದ ವರದಿಯ ವಿರುದ್ಧ ಸದನದ ಒಳಗೆ ಹೊರಗೆ ಹೋರಾಟ ಮಾಡಿದ್ದರು. ಅವರ ಬದ್ಧತೆ, ನ್ಯಾಯಪರತೆ, ಬಡಜನರ ಪರ ಕಾಳಜಿ ಎಲ್ಲರಿಗೂ ಆದರ್ಶ ಎಂದರು.
ಜಿಲ್ಲೆಯಲ್ಲಿ ಕಾರ್ಯಗತವಾಗಿರುವ ನೀರಾವರಿ ಯೋಜನೆಗಳೇ ಇರಲಿ, ಮೂಲಭೂತಸೌಕರ್ಯ ಯೋಜನೆಗಳೇ ಇರಲಿ ಅದರಲ್ಲಿ ತಮ್ಮ ತಂದೆಯವರ ಶ್ರಮ ಇದೆ. ಹೀಗಾಗಿಯೇ ತಮ್ಮ ತಂದೆಗೆ ಲೋಕನಾಯಕ ಎಂಬ ಬಿರುದನ್ನು ಪೂಜ್ಯ ಚೆನ್ನಬಸವ ಪಟ್ಟದ್ದೇವರು ನೀಡಿದ್ದರು ಎಂದರು.
ಛಲವಾದಿ ಭೀಮಣ್ಣ-ಗುರುಬಸವ ಪಟ್ಟದ್ದೇವರು ಬಣ್ಣನೆ: ಭೀಮಣ್ಣ ಖಂಡ್ರೆ ಅವರು ಛಲವಾದಿಗಳಾಗಿದ್ದರು. ಛಲಬೇಕು ಶರಣಂಗೆ ಎಂಬುದಕ್ಕೆ ಅನ್ವರ್ಥವಾಗಿದ್ದರು. ಅವರು ಗುಡುಗಿದರೆ ವಿಧಾನಸೌಧವೇ ನಡುಗುತ್ತಿತ್ತು. ಅನ್ಯಾಯದ ವಿರುದ್ಧ ಅವರು ಸದಾ ಸಿಡಿದು ನಿಂತು ನೊಂದವರಿಗೆ ನ್ಯಾಯಕೊಡಿಸುತ್ತಿದ್ದರು ಎಂದರು.
ಚನ್ನಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಭೀಮಣ್ಣ ಖಂಡ್ರೆ ಅವರ ಕೊಡುಗೆ ಅಪಾರವಾಗಿದೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ, ಹಿಂದುಳಿದ ಬೀದರ್ ಭಾಗದ ಯುವಜನರು ಎಂಜಿನಿಯರಿAಗ್ ಶಿಕ್ಷಣ ದೊರಕಿಸುವಲ್ಲಿ ಅವರ ಶ್ರಮ ಅಪರಿಮಿತವಾದ್ದು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಸ್ವಂತ ಕಚೇರಿಯೂ ಇರಲಿಲ್ಲ. ಬೆಂಗಳೂರು ನಗರದ ಹೃದಯ ಭಾಗದಲ್ಲಿ ಭೂಮಿ ಖರೀದಿಸಿ, ಭವ್ಯ ಕಟ್ಟಡ ನಿರ್ಮಿಸಿ, ಸಮಾಜ ಸಂಘಟಿಸಿ ಗಟ್ಟಿಗೊಳಿಸಿದ ಕೀರ್ತಿಯೂ ಭೀಮಣ್ಣ ಖಂಡ್ರೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
*****
ಸಹಾಯಕ ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಬೀದರ
office: 08482-225370
खबर कि अन्य लिंक :